Friday, December 4, 2020

ಹ್ಯಾಗೆ ಹೇಳೋದು ನಮ್ಮೂರ ಬಗ್ಗೆ,

ಮಲೆನಾಡಿನ ಹಸಿರಿನ ನಟ್ಟ ನಡುವೆ ಸುಪ್ತವಾಗಿ ಮಲಗಿರುವ ಸುಂದರ ಗ್ರಾಮವೆಂದಾಗಲಿ,
ದಿನವೂ ಅಲೆಗಳ ಮೊರೆತಕ್ಕೆ ಎದ್ದೇಳುವ ಕಡಲ ಕಿನ್ನರಿಯೆಂದಾಗಲಿ,
ಪರ್ವತದ ಇಳಿಜಾರಲ್ಲಿ ಬೆರಳ ತುದಿಯ ಮೇಲೆ ನಿಂತು ಮೋಡಗಳ ಮಧ್ಯೆ ಮುಗಿಲ ಚುಂಬಿಸುವ ಮಾಯಾವಿ ಎಂದಾಗಲಿ, ಊಹೂಂ , ಇದ್ಯಾವುದೂ ಅಲ್ಲದ ಅತಿ ಸಾಧಾರಣ ಊರದು.
ಹೊಸತನ ಹೊತ್ತು ತರಲು ಕನಿಷ್ಠ ಪಕ್ಷ ಒಂದು ಸಣ್ಣ ತೊರೆಯೂ ಇರದ,
ಬಯಲು ಸೀಮೆಯ ಇತ್ತ ಕುಗ್ರಾಮವೂ ಅಲ್ಲದ, ಅತ್ತ ಸುಂದರ ಸುಶೀಲ ಸಂಪತ್ಭರಿತವೂ ಅಲ್ಲದ,
ಒಟ್ಟಿನಲ್ಲಿ ಏನೆಂದರೆ ಏನೂ ವಿಶೇಷತೆ ಇಲ್ಲದ ಜಾಗವದು.

ಆದರೂ ಜಗತ್ತಿನ ಎಲ್ಲ ಜಾಗಗಳಿಗೂ ಅವುಗಳದೆ ಆದ ಕಥೆಗಳಿವೆ. ಅತಿ ಸಾಮಾನ್ಯವಾದ ಇವುಗಳಲ್ಲಿ ಕೇಳುವ ಮನಗಳಿಗೆ ವಿಶೇಷತೆ ಕಂಡರೂ ಅಚ್ಚರಿಯಿಲ್ಲ.
ಅದಕ್ಕೆಂದೇ ಇವತ್ತು ನಮ್ಮೂರ ಖಜಾನೆಯಿಂದ ಕಥೆಯೊಂದ ತಂದಿರುವೆ, ಕೇಳಿ ಸ್ವಲ್ಪ ತಾಳ್ಮೆಯಿಂದ. ಬೇಜಾರಾದರೆ, ಮೊದಲೇ ಹೇಳಿದೆನಲ್ಲ, ಸಾಮಾನ್ಯ ಊರೆಂದು, ಬಿಟ್ಟು ಬಿಡಿ.
ಇಷ್ಟವಾದರೆ ಒಮ್ಮೆ ಭೇಟಿ ಕೊಡಿ. ನಿಮಗೆ ಇನ್ನೊಂದು ಕಥೆ ಸಿಗಬಹುದು

ಈ ಕಥೆ ನಡೆಯುವುದು ಕಡು ಬೇಸಿಗೆಯ ಕಾಲವಾದ, ವೈಶಾಖ ಕಳೆದು ಜ್ಯೇಷ್ಠ ಮಾಸ ಶುರುವಾಗುವ ಸಮಯದಲ್ಲಿ, ಚಂದಿರ ಪುನರ್ಜನ್ಮ ಪಡೆವ ಅಮವ್ಯಾಸೆಯ ದಿನದಂದು. ದಿನವೆಂದರೆ ಬರೀ ಹಗಲಲ್ಲ ಮತ್ತೆ, ಹೆಚ್ಚು ಕಡಿಮೆ ಪೂರ್ತಿ ದಿನ.

ಕಥೆ ನಡೆಯುವ ಜಾಗಕ್ಕೆ ತಲುಪಲು, ನಾವು ಜಿಲ್ಲಾ ಕೇಂದ್ರವಾದ ವಿಜಯಪುರದಿಂದ ಅಥಣಿ ಮಾರ್ಗವಾಗಿ ಹೋಗುವ ಬಸ್ಸು ಹತ್ತಬೇಕು. ಅಬ್ಬಬ್ಬಾ ಅಂದರೆ 30 ನಿಮಿಷದಲ್ಲಿ ಬಸ್ಸು ನಮೂರ ನಿಲ್ದಾಣ ಸೇರುತ್ತೆ.
ನಿಲ್ದಾಣವೆಂದರೆ ಬೆರೆನಲ್ಲ, ಅದೇ ರಸ್ತೆಯ ಮೇಲೆ ತಾತ್ಕಾಲಿಕ ನಿಲುಗಡೆ . ಅಕ್ಕ ಪಕ್ಕ ಒಂದಿಷ್ಟು ಹೋಟೆಲು ಅಂಗಡಿಗಳು. ಹೋಟೆಲೆಂದರೆ ಮತ್ತೇನಲ್ಲ, ಖಾರ ಚುರುಮುರಿ , ಬಜ್ಜಿ , ಚಹಾ ಅಷ್ಟೇ.
ಒಂದು ಸರಿಯಾದ ನಿಲ್ದಾಣವಿಲ್ಲದಿದ್ದರೂ, ಎಲ್ಲ ವೇಗದೂತ ಬಸ್ಸುಗಳೂ ಸಹ ತುಸು ನಿಂತು ಹೋಗುವ ಹಿರಿಮೆ ನಮ್ಮೂರಿನದು.
ಒಂದೇ ಉಸಿರಿನಲ್ಲಿ ಓಡಿದರೆ, ಐದೇ ನಿಮಿಷದಲಿ ಊರಿನ ಬೇರೆ ತುದಿ ತಲುಪುವಷ್ಟು ಚಿಕ್ಕ ಗ್ರಾಮ, ಆದರೂ ಎರಡೆರಡು ಬಸ್ಸು ನಿಲ್ದಾಣಗಳು, ಮ್ಯಾಲಿನ ಲೈನು, ತೇಳಗಿನ ಲೈನು.
ಯಾರು ಮೇಲೆ ಕೆಳಗೆ ಗುರುತು ಮಾಡಿದರೊ ಗೊತ್ತಿಲ್ಲ. ಲೈನು ಅಂದರೇನೆಂದು ಕೇಳಲೇಬೇಡಿ.

ಮೇಲಿನ ಲೈನ್ ಅಲ್ಲಿ ಇಳಿದು, ಬಲಗಡೆಯ ರಸ್ತೆಯ ಹಿಡಿದು ಊರ ಕಡೆ ನಡೆಯಿರಿ.
ಹಾ, ಆ ನಿಮ್ಮ ಎತ್ತಿನ ಗಾಡಿಯಂತೆ ಚಕ್ರವಿರುವ ಬ್ಯಾಗುಗಳನ್ನ ತಂದಿಲ್ಲ ತಾನೇ. ನಮೂರಲ್ಲಿ ಕಾಂಕ್ರೀಟ್ ರಸ್ತೆಗಳು ಧಾವಂತ ಹೂಡಿಲ್ಲ. ತಗ್ಗು ತಗ್ಗಾದ ಮಣ್ಣಿನ ರಸ್ತೆಗಳು, ನಡುನಡುವೆ ಬಚ್ಚಲು ನೀರು ಹೋಗಲು ಮಾಡಿರುವ ಕಾಲುವೆಗಳು. ಹುಷಾರಾಗಿ ದಾಟಿ ಆಯ್ತಾ.

ಹೀಗೆ, ನಡೆಯುತ್ತ ಹಾರುತ್ತ ಕಿರಿದಾದ ಸಂದು ಗೊಂದುಗಳನು ದಾಟಿ ಬಂದರೆ ನಿಮಗೊಂದು ದೊಡ್ಡ ಆಲದ ಮರ ಕಾಣುತ್ತದೆ. ಅದರ ಒಂದು ಕಡೆ ಬಸವಣ್ಣನ ಗುಡಿ ಇನ್ನೊಂದೆಡೆ ರಸ್ತೆ ಮಧ್ಯೆ ಸಣ್ಣ ಕಟ್ಟೆ. ಅದೇ ಹೊಳೀಕಟ್ಟೆ.
ಅಲ್ಲಿಗೆ ಬಂದ ರಸ್ತೆಯ ನೇರಕ್ಕೆ ಕಾಣುವ ಓಣಿಯ ಹೆಸರು ಮಂಗೊಂಡರ ಓಣಿ.
ನಿಮ್ಮ ನೇರಕ್ಕಿರುವ ರಸ್ತೆ ಬಳಸಿ ಒಳ ಬನ್ನಿ. ಸ್ವಲ್ಪ ಮುಂದೆ ದೊಡ್ಡದೊಂದು (ಅಕ್ಕ ಪಕ್ಕದಕ್ಕಿಂತ ಅಷ್ಟೇ) ಎರಡಂತಸ್ತಿನ ಮನೆಯೊಂದು ಕಾಣುತ್ತದೆ. ಅದೇ ಮಹಡಿ ಮನೆ, ಊರಿನವರ ಮಾತಲ್ಲಿ ಮಾಡೆದ ಮನೆ. ನಮ್ಮಪ್ಪ ಹುಟ್ಟಿ ಬೆಳೆದ, ನಾನು ಬಾಲ್ಯದಲ್ಲಿ ಆಡಿ ಓಡಾಡಿದ ಮನೆ.
ಈ ಮನೆಗೆ ಊರಲ್ಲಿ ಅದರದೇ ಆದ ಗೌರವಾನ್ವಿತ ಸ್ಥಾನವಿದೆ. ಈ ಕಥೆಯಲ್ಲಿ ನಿಗೂಢ ಕುತೂಹಲಕಾರಿಯಾದ ಹಿನ್ನಲೆಯಿದೆ. ಇಷ್ಟು ಸಾಕು, ಈಗ ಬೇರೊಂದು ಸಮಯದ ಬೇರೊಂದು ಲೋಕಕ್ಕೆ ಹೋಗೋಣ.

ಕಡುಬಿಸಿಲಿನ ಬೇಸಿಗೆಯ ದಿನಗಳವು. ಬೆಳೆದ ಬೆಳಯನ್ನೆಲ್ಲ ರಾಶಿ ಮಾಡಿ ಮನೆಗೆ ಸಾಗಿಯಾಗಿದೆ. ಮಳೆಗಾಲ ಇನ್ನೂ ಸ್ವಲ್ಪ ದೂರ. ಊರ ಗಂಡು ಹೆಣ್ಣುಗಳಿಗೆ ಮಾಡಲು ಕೆಲಸವಿಲ್ಲ. ಅಂತ ಆ ಊರಿಗೆ ಪಾಳೆಯಗಾರ್ತಿ ಒಬ್ಬಳಿದ್ದಾಳೆ. ಹೆಸರು ಬನಶಂಕರಿ. ನೋಡಲು ರಣಚಂಡಿ, ರೂಪದಂತೆ ಗುಣ, ಹುಟ್ಟು ಗಯ್ಯಾಳಿ, ಜಗಳಗಂಟಿ.
ಈ ಊರಿನವರಿಗೂ ಪಕ್ಕದೂರಿನವರಿಗೂ ಆಗಾಗ ಜಗಳ ಮೈ ಕೈ ಇದ್ದಿದ್ದೇ. ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದುಂಟು. ಎಲ್ಲ ಜಗಳದಲ್ಲೂ ಇವಳೇ ಮುಂದಾಳು.
ಇತ್ತೀಚಿಗೆ ಸುದ್ದಿ ಬಂದಿದೆ. ಪಕ್ಕದೂರಿನ ಪುಂಡರು ದರೊಡೆಯಲಿ ತೊಡಗಿದ್ದಾರೆಂದು. ಯಾವುದೇ ರಾಜತಾಂತ್ರಿಕ ಎಚ್ಚರಿಕೆಗಳು ಫಲ ಕೊಡುತ್ತಿಲ್ಲ. ಕೊನೆಗೆ ಉಳಿದಿರುವದು ದೊಣ್ಣೆ ಮಾರ್ಗವೊಂದೇ. ವೈದ್ಯ ಹೇಳಿದ್ದು ರೋಗಿ ಬಯಸಿದ್ದು ಒಂದೇ ಎನ್ನುವಂತೆ, ಖಾಲಿ ಕುಳಿತ ಊರ ಪುಂಡರೂ ಅದಕ್ಕೆ ಕಾಯುತ್ತಿದ್ದರೆನ್ನಿ.

ಯುದ್ಧ ಘೋಷಣೆಯಾಗಿಯೇ ಬಿಟ್ಟಿತು. ಎರಡೂ ಊರ ನಡುವೆ ಇರುವ ಸ್ಮಶಾನ ರಣಭೂಮಿ. ಮಧ್ಯ ರಾತ್ರಿಯ ತಂಪಾದ ಹೊತ್ತಲ್ಲಿ ರಣಕಹಳೆ. ದಿನದ ಬಿಸಲಲ್ಲಿ ಬೆವರು ಸುರಿಸುವವರಾರು. ಮೊದಲೇ ಸೋಮಾರಿಗಳು.

ಯುದ್ಧವೆಂದರೆ ಕೇಳಬೇಕೆ. ಎಷ್ಟೊಂದು ತಯಾರಿಯಾಗಬೇಕು. ನಿನ್ನೆ ರಾತ್ರಿಯಷ್ಟೇ, ಶಂಕರಿಯ ಸೇನಾಧಿಕಾರಿ ಮನೆಗೆ ಬಂದು ಹೋಗಿದ್ದಾಳೆ. ಮನೆಗೆ ಅಂದರೆ ಮಹಡಿ ಮನೆಗಲ್ಲ. ಪಕ್ಕದಲ್ಲಿರುವ ಮನೆಗೆ. ಮಹಡಿ ಮನೆ ಶಂಕರಿಯ ತವರು ಮನೆಯಾದರೂ, ಅಲ್ಲಿಗೆ ಅರಮನೆಯವರ ಪ್ರವೇಶವಿಲ್ಲ. ಯುದ್ಧದ ರಾತ್ರಿ ಹೊರತುಪಡಿಸಿ.  ಸಂಪ್ರದಾಯದಂತೆ, ರಾಕ್ಷಸ ರೂಪವತಿಯಾದ ಜೋಗರಾಣಿ, ಯುದ್ಧದ ಸುದ್ದಿಯನ್ನು ಮೊದಲು ಇಲ್ಲಿಗೆ ತಂದಿದ್ದಾಳೆ. ಎಲೆ ಅಡಿಕೆಯ ಸಾಂಕೇತಿಕವಾಗಿ ಕೊಟ್ಟು, ಯುದ್ಧ ಸಿದ್ಧತೆಗೆ ಅಪ್ಪಣೆಯಿಟ್ಟಿದ್ದಾಳೆ.

ಮರುದಿನ ಬೆಳಗಿನ ಸೂರ್ಯ ಸ್ವಲ್ಪ ಜಾಸ್ತಿಯೇ ಪ್ರಕಾಶಿಸುತ್ತಿದ್ದಾನೆ. ಅವನಿಗೂ ಗೊತ್ತಾಗಿರಬೇಕು
ಊರಲ್ಲೆಲ್ಲ ಚಟುವಟಿಕೆ ತೀವ್ರಗೊಂಡಿದೆ, ಏನೋ ಸಂಭ್ರಮ.
ಇತ್ತ ತವರು ಮನೆಯಲ್ಲಿ, ಎಲ್ಲರೂ ಪುರುಸೊತ್ತಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಜಗಳಕ್ಕೆ ಹೊರತು ನಿಂತಿರುವ ಸೈನ್ಯಕ್ಕೆ ಅಡುಗೆ ಮಾಡಿ ಅರಮನೆಗೆ ರವಾನಿಸಬೇಕು. ಅದಲ್ಲದೆ ಶಂಕರಿ ಮತ್ತು ಅವಳ ಸೇನಾ ತುಕಡಿಗೆ ರಾತ್ರಿ ಮನೆಯಲ್ಲಿಯೇ ಔತಣ. ಬಹು ದಿನಗಳ ನಂತರ ಮಗಳು ತವರಿಗೆ ಬರುತ್ತಿದ್ದಾಳೆ. ಅದೂ ರಣಚಂಡಿಯಾಗಿ. ವಿಶೇಷವಾಗಿ ಅವಳಿಗಿಷ್ಟವಾದ ಕೊಬ್ಬರಿ ಕಡುಬೇ ಆಗಬೇಕು ಊಟಕ್ಕೆ. ಸುಮಾರು 100-120 ಜನರ ತುಕಡಿ. ಅದಲ್ಲದೆ, ಊರ ಮಗಳ ನೋಡಿ ಹರಸಿ ಬಿಳ್ಕೊಡಲು ಬರುವ ನೆರೆ ಹೊರೆಯವರು. ಎಲ್ಲರಿಗೂ ಇಲ್ಲೇ ಊಟ.
ಊರ ಒಡತಿಯ ತವರು ಮನೆಯಾದರೂ, ಯಾವುದೇ ವಿಶೇಷ ಸೌಲಭ್ಯಗಲಿಲ್ಲ. ಎಲ್ಲರಂತೆ ಊರ ಕೆಳಗಿನ ಕೇರಿಯಲ್ಲಿರುವ ಸಿಹಿ ನೀರ ಬಾವಿಯಿಂದ ನೀರು ತರಬೇಕು. ಮನೆಯ ಗಂಡಸರೆಲ್ಲ ನೀರು ಹೊತ್ತು ತರುತ್ತಿದ್ದರೆ ಹೊತ್ತು ಹೋಗಿದ್ದೇ ಅರಿವಿಲ್ಲ. ಅದಾಗಲೇ ಸೂರ್ಯ ನೆತ್ತಿಯೇರಿ ಕುಳಿತಿದ್ದಾನೆ. ಅಂತೂ ಸೇನೆಯ ಅಡಿಗೆ ತಯಾರಾಗಿದೆ. ಅಗೋ, ಅಲ್ಲಿ ನೋಡಿ. ಊರ ಹೆಣ್ಣು ಮಕ್ಕಳೆಲ್ಲ ತಮ್ಮ ತಮ್ಮ ಅಡುಗೆ ಪಾತ್ರೆಯನ್ನ ತಲೆಯ ಮೇಲೆ ಹೊತ್ತು ಹೊರಟಿದ್ದಾರೆ, ಅರಮನೆಯೆಡೆಗೆ.
ಅಡುಗೆ ಮಾಡಿದ ದಣಿವೆಲ್ಲ, ಕನ್ನಡಿ ಮುಂದಿನ ಶೃಂಗಾರಲಿ ಕರಗಿ ಹೋಗಿದೆ. ಅರಮನೆ ನೋಡುವ ತವಕವೋ, ಯುದ್ಧದಲಿ ಭಾಗಿಯಾದ ಹೆಮ್ಮೆಯೋ, ತಮ್ಮಿಷ್ಟದ ಯೋಧನಿಗೆ ಉಣಬಡಿಸುವ ಮನದಾಸೆಯೋ, ಒಟ್ಟಿನಲಿ ಹೆಂಗಳೆಯರೆಲ್ಲ ಹಿರಿ ಹಿರಿ ಹಿಗ್ಗಿದಂತಿದೆ.

ಇತ್ತ ಗಂಡಸರು, ನೀರು ತುಂಬಿಸಿ, ರಾತ್ರಿ ಊಟಕ್ಕೆ ಬೇಕಾದ ತಟ್ಟೆ ಮತ್ತಿತ್ಯಾದಿ ಸಾಮಗ್ರಿಗಳ ತೊಳೆದು ಒಪ್ಪವಾಗಿಸಿ ಆಗಿದೆ. ಊಟದ ನಂತರದ ಎಲೆ ಅಡಿಕೆ ತಾಂಬೂಲವೂ ತಯಾರಿದೆ. ರಾತ್ರಿಗೆ ದೀವಟಿಗೆ ಪಂಜು ಸುತ್ತಿ ಇಟ್ಟಾಗಿದೆ.

ಅತ್ತ ಅರಮನೆಯಲ್ಲಿ, ಮಧ್ಯಾನ್ಹದ ಊಟ ಮುಗಿದಿದೆ. ಹೆಂಗಳೆಯರೆಲ್ಲ ಮನೆಗೆ ಮರಳುವ ಸಮಯ.
ಸೈನ್ಯಕ್ಕೆ ಪುರುಸೊತ್ತಿಲ್ಲದ ಅವಸರ. ಕೊನೆಯದಾಗಿ ಕತ್ತಿವರಸೆಯ ಅಭ್ಯಾಸವಾಗಬೇಕು. ಅದಕ್ಕೂ ಮುಂಚೆ ಶಂಕರಿಯ ಪ್ರಜಾ ಭೇಟಿಯಾಗಬೇಕು. ಯುದ್ಧಕ್ಕೂ ಮೊದಲು, ಊರನ್ನುದ್ದೇಶಿಸಿ ಮಾತನಾಡುವುದು ವಾಡಿಕೆ. ಅದಲ್ಲದೆ, ಮಳೆಗಾಲ ಇನ್ನೇನು ಹತ್ತಿರವೇ. ಇಂದು ರಾತ್ರಿ ಅವಳು ಮರಳಿ ಬರದಿದ್ದರೆ, ಈ ವರ್ಷದ ಹಿಂಗಾರಿನಲಿ ಕೃಷಿ ಕಾರ್ಯಗಳ ಗತಿಯೇನು. ಊರ ಒಡತಿ ಹೇಳದೆ, ಒಂದು ಬೀಜವೂ ಬಿತ್ತದು.

ಊರ ಒಡತಿ, ಜನಮನಗಳ ಅಧಿದೇವತೆ, ಚಂಡಿ ಚಾಮುಂಡಿ, ಯುದ್ಧಕ್ಕೆ ಸನ್ನದ್ಧಳಾಗಿದ್ದಾಳೆ.
ಮನೆ ಮನೆಯಿಂದ, ಬಣ್ಣ ಬಣ್ಣದ ಹೂವುಗಳ ರಾಶಿ ಬಂದಿದೆ ಅವಳ ಸಿಂಗರಿಸಲು. ಕೋಪದಿಂದ ಕೆಂಪೇರಿದ ಅವಳ ಮುಖ ರೌದ್ರವ ರೂಪ ತಾಳಿದೆ. ರೆಪ್ಪೆ ಬಡಿಯದ ಆ ಕಣ್ಣುಗಳು ಕಿಡಿ ಕಾರುತ್ತಿವೆ. ಮೂಗಿನ ಮೇಲಿನ ನತ್ತು, ತಲೆ ತುಂಬ ಮುಡಿದಿರುವ ಹೂಮಾಲೆ, ಅವಳನ್ನು ಸಾಕ್ಷಾತ್ ರಣಚಂಡಿಯಾಗಿಸಿವೆ.
ಅಂಗರಕ್ಷಕರು ಕೇಕೆ ಹಾಕುತ್ತ ಹೊರನಡೆದಿದ್ದಾರೆ. ಮುಂದೆ ಕೋಲು ಕತ್ತಿ ಹಿಡಿದ ಕೆಲವರು. ಹಿಂದೆ ಊರ ಧ್ವಜ, ಶಂಕರಿಯ ಲಾಂಛನ ಹಿಡಿದ ಗುಂಪು. ಜೊತೆಗೆ ಶಂಖ ಜಾಗಟೆ ಗಂಟೆಗಳ ಸದ್ದು. ಹೊರಟಿದ್ದಾಳೆ ಹೊಳೀಕಟ್ಟಿಯ ಕಡೆಗೆ. ಊರಿಗೆ ಊರೇ ಬಂದು ನಿಂತಿದೆ, ಒಡತಿಯ ನೋಡಲು, ಕೇಳಲು. ದಾರಿಯುದ್ದಕ್ಕೂ ಮನೆಯ ಛಾವಣಿಗಳ ಮೇಲೆ, ಗಿಡಮರಗಳ ರೆಂಬೆ ಕೊಂಬೆಗಳ ಮೇಲೆ, ಬಾಗಿಲು ಕಿಟಕಿ , ಗೋಡೆ ಗೋಪುರಗಳ ಮೇಲೆ. ಎಲ್ಲೆಂದರಲ್ಲಿ ಜನ. ಹೋಳಿಕಟ್ಟೆಯಲ್ಲಂತೂ, ಕಿಕ್ಕಿರದ ಜನಸಾಗರ, ನೂಕು ನುಗ್ಗಲು. ಅಂಗ ರಕ್ಷಕರ ಕೇಕೆ ಕೇಳುತ್ತಿದ್ದಂತೆ ಜನರ ಕೇಕೆ ಶುರು. ಎಲ್ಲ ಕೂಗು, ಕುಣಿತ ಮುಗಿದು ಜನಸ್ಥೋಮ ಕಾತರದಿ ಕಾದಿರುವ ಸಮಯ ಬಂದಿದೆ.
ವಾಡಿಕೆಯಂತೆ ಒಡತಿ ಮುಂಬರುವ ಹಿಂಗಾರಿನ ಕೃಷಿ ಕಾರ್ಯಗಳ ಪಟ್ಟಿ ಮಾಡುತ್ತಿದ್ದಾಳೆ, ನಿಯಮಾನುಸಾರವಾಗಿ. ಯುದ್ಧ ಸೋಲುವ ಮಾತೇ ಇಲ್ಲ, ಅವಳು ಮರಳಿ ಬಂದು ಖುದ್ದಾಗಿ ಮೊದಲ ನೇಗಿಲನ್ನು ಹೂಡುತ್ತಾಳೆನ್ನುವುದು ಸೂರ್ಯ ಚಂದ್ರಾದಿಯಾಗಿ ಎಲ್ಲರಿಗೂ ಗೊತ್ತು. ಸೂರ್ಯ ಮನೆಗೆ ಮರಳುತ್ತಿದ್ದಾನೆ, ಸಿದ್ಧತೆಯ ನೋಡಿ ತೃಪ್ತನಾದಂತೆ.
ಸೇನೆ ಗರಡಿ ಮನೆಯೆಡೆಗೆ ಹೊರಡುವ ಹೊತ್ತು. ಹೆಚ್ಚು ಸಮಯವಿಲ್ಲ, ಕೊನೆಯ ತಾಲಿಮಿಗೆ.

ಹೋಳಿಕಟ್ಟೆಯಿಂದ ನೇರವಾಗಿ ಸವಾರಿ ತಾಲೀಮು ಶಾಲೆಗೆ ನಡೆಯಿತು. ಇಡೀ ಸೈನ್ಯ ಕತ್ತಿವರಸೆ, ಜಂಗಿ ಕುಸ್ತಿ ಎಂದು ವಿಧವಿಧದ ಯುದ್ಧ ಸನ್ನಿವೇಶಗಳ ಅಭ್ಯಾಸದಲ್ಲಿ ಮುಳುಗಿತ್ತು.

No comments:

Post a Comment