Tuesday, October 25, 2016

ಕಳೆದು ಹೋದ ಕವನಗಳ ಹುಡುಕಿ ತರುವ ಯತ್ನದಲ್ಲಿ,
ಮರೆತು ಹೋದ ಮಾತುಗಳ ಮೇಳೈಸುವ ಪ್ರಯತ್ನದಲ್ಲಿ,
ಮಂಪರಿನಿಂದ ಮುದುಡಿ ಬಿದ್ದ ಕ್ರೀಯಾಶೀಲತೆಯ ಬಡಿದೆಬ್ಬಿಸುವಲ್ಲಿ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||

ಎಂದೋ ಅರ್ಥೈಸಿದ ಮೊದಲ ಚರಣವೇ ತಿಳಿಯುತ್ತಿಲ್ಲ !
ಇನ್ನು ಕೊನೆಯ ಸಾಲುಗಳ ಮಾತೆಲ್ಲಿ ?

ಬರೆಯುವುದ ಬಿಟ್ಟರೆ ಶಬ್ದಗಳೂ ಬದುಕವು ತಲೆಯೊಳಗೆ,
ಈಗ ಬರೆಯಬೇಕೆಂದರೂ ಬಾರವು ಲೇಖನಿಯ ತುದಿಗೆ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||

ನಾನೇ ಗೀಚಿದ ಸಾಲುಗಳು, ಕೇಳಿದಂತಿವೆ;
ನನಗೂ-ನಿನಗೂ ಎಲ್ಲಿಯ ಸಂಬಂಧ!?

ಕದನವೊಂದು ಒಡಮಾಡಿದೆ ಮನದ ಮೂಲೆಯಲಿ,
ಸಂಧಾನವಾಗದಿರೆ ಯುದ್ಧವಾದೀತು !

ಯಾವುದು ಮುಖ್ಯ ಕವಿತೆಗೆ; ಶಬ್ದವೋ? ಸಾರಾಂಶವೋ?

ದನಿಯೊಂದು ಉಸುರಿತು, ಮನದ ಮೂಲೆಯಲಿ;
ಶಬ್ದ ಬರಿ ಸಂವಹನ ಮಾಧ್ಯಮ,
ಬಾಹ್ಯ ಸೌಂದರ್ಯಕ್ಕೆ ಮರುಳಾಗಾದಿರು ಮೂಢ!
ಕಣ್ಣಿನಲಿ ಹೇಳುವ ಕವಿತೆಗೆ ಅಕ್ಷರ ಮಾಲೆ ಬೇಕೇನು?

ಇನ್ನಾವುದೋ ಅರಚುತಿಹುದು !
ಶಬ್ದಗಳೇ ಅಲ್ಲವೇ ಕಾವ್ಯಕ್ಕೆ ಶೃಂಗಾರ,
ಶೃಂಗಾರವಿರದ ಸಪ್ಪೆಯ ಮೂಸುವುದು ಯಾರಾ?

ಆದರೆನ್ನ ಬುದ್ಧಿಗೆ ಜಾಣ ಕಿವುಡು ! ||

ಕಾವ್ಯ ಸೃಷ್ಠಿಯ ಕದನದಲಿ ಪದಗಳಿಗೆ ದನಿಯಿಲ್ಲ,
ಎಷ್ಟು ಹೆಕ್ಕಿ-ಹುಡುಕಿದರೂ ಶಬ್ದಗಳೇ ಸಿಗುತ್ತಿಲ್ಲ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ !

ಹೊಸದಾಗಿ ಹೊಸೆಯಬೇಕಿದೆ ಅವೇ ಹಳೆಯ ಶಬ್ದಗಳ|
ಮೂಡಿಬರಬೇಕಾಗಿದೆ ಮುಂಜಾನೆ ಕವಿತೆ; ಗೋಧೂಳಿ ಕವನ,
ಏನಾದರಾಗಲಿ ಶುರು ಮಾಡಬೇಕಿದೆಯಣ್ಣ;
ಅರ್ಧ ಬರೆದ ಕವಿತೆ ||

No comments:

Post a Comment